ಭುವಿ ಕ್ರಿಯೇಶನ್ಸ್ ಲಾಂಛನದಲ್ಲಿ ನಾಯಕನಟ ನೆನಪಿರಲಿ ಪ್ರೇಮ್ ಅವರ ಪುತ್ರ ಮಾ|| ಏಕಾಂತ್ ಪ್ರೇಮ್ ಮತ್ತು ಮಾ|| ಹೇಮಂತ ಮಾ. ಕಾರ್ತಿಕ್ ಮತ್ತು ಮಾ. ಸೋಹಿಬ್ ಮುಖ್ಯ ಭೂಮಿಕೆಯಲ್ಲಿರುವ ಚಿತ್ರ ‘ರಾಮರಾಜ್ಯ’-ಗಾಂಧಿ ತಾತನ ಕನಸು... ಇದು ಮಕ್ಕಳ ಚಿತ್ರ. ಆರ್. ಶಂಕರ ಗೌಡ ನಿರ್ಮಾಣದ, ನೀಲ್ ಕೆಂಗಾಪುರ ರಚನೆ-ನಿರ್ದೇಶನದ ಈ ಚಿತ್ರಕ್ಕೆ ಎ.ಟಿ. ರವೀಶ್ ಸಂಗೀತ, ಎ. ಮುರಳಿ ಸಂಕಲನ, ಚಾಮರಾಜ್ ನೃತ್ಯ, ಜಿ. ವೆಂಕಟಾಚಲ ಛಾಯಾಗ್ರಹಣದ ಈ ಚಿತ್ರದ ಮುಹೂರ್ತ ದಿನಾಂಕ ೧೧.೧೦.೨೦೧೬ರಂದು ಸಂಕಷ್ಟಹರ ಗಣಪತಿ ದೇವಸ್ಥಾನ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಮೋದಿ ಆಸ್ಪತ್ರೆ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು- ಇಲ್ಲಿ ನೆರವೇರಿತು. ನಾಯಕನಟ ನೆನಪಿರಲಿ ಪ್ರೇಮ್ ಸೇರಿದಂತೆ ಚಿತ್ರರಂಗದ ಅನೇಕ ಗಣ್ಯರು ಈ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದರು.
ಲವ್ಲಿ ಸ್ಟಾರ್ ಎಂದೇ ಹೆಸರಾಗಿರುವ ನೆನಪಿರಲಿ ಪ್ರೇಮ್ ಪುತ್ರ ಬಾಲ ಕಲಾವಿದನಾಗಿ ಸಾಕಷ್ಟು ಹೆಸರು ಮಾಡುತ್ತಿದ್ದಾನೆ. ಮೂಮೂ ಟೀ ಅಂಗಡಿ ಸಿನಿಮಾದಲ್ಲಿ ಸಣ್ಣದೊಂದು ಪಾತ್ರ ಮಾಡಿದ್ದ ಏಕಾಂತ್ ನಂತರ ರವಿಚಂದ್ರನ್ ಪುತ್ರನ ‘ಸಾಹೇಬ’ದಲ್ಲೂ ನಟಿಸಿದ್ದಾನೆ. ಇದರ ಜೊತೆಗೆ ‘ರಾಮರಾಜ್ಯ-ಗಾಂಧಿ ಕನಸು’ ಎನ್ನುವ ಈ ಮಕ್ಕಳ ಚಿತ್ರದಲ್ಲಿ ಏಕಾಂತ್ ಪ್ರಧಾನ ಪಾತ್ರದಲ್ಲಿ ನಟಿಸಲಿದ್ದಾನೆ. ಹಿಂದೆ ‘ಪುನೀತ್’ ಹೆಸರಿನ ಚಿತ್ರ ಮಾಡಿದ್ದ ನೀಲ್ ಕೆಂಗಾಪುರ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಿದ್ದ ಅರಗಿಣಿ ಎನ್ನುವ ಧಾರಾವಾಹಿಯ ಸಂಚಿಕೆ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದ ನೀಲ್ ಅವರಿಗೆ ಅನೇಕ ದಿನಗಳಿಂದ ದೊಡ್ಡವರಿಗಾಗಿ ಒಂದು ಮಕ್ಕಳ ಚಿತ್ರವನ್ನು ನಿರ್ದೇಶಿಸಬೇಕು ಎನ್ನುವ ಕನಸಿತ್ತಂತೆ. ಹೀಗಾಗಿ ವಿಜಯದಶಮಿಯ ದಿನ ಈ ಸಿನಿಮಾವನ್ನು ಆರಂಭಿಸಿದ್ದಾರೆ.
೨೨ ದಿನಗಳ ಕಾಲ ಒಂದೇ ಹಂತದಲ್ಲಿ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ಹಾಗೂ ದೇವನಹಳ್ಳಿಯಲ್ಲಿ ನಡೆಯಲಿದೆ. ಶಿಕ್ಷಕರು ಮತ್ತು ಪೋಷಕರಿಗಾಗಿ ವಿಶೇಷ ಸಂದೇಶಗಳು ಈ ಚಿತ್ರದಲ್ಲಿವೆಯಂತೆ. ‘ಸರ್ವರಿಗೂ ಒಂದೇ ನ್ಯಾಯ’ ಎನ್ನುವ ಗಾಂಧೀಜಿ ಕನಸನ್ನು ತೆರೆಯಮೇಲೆ ತರಲಾಗುತ್ತಿದೆ ಎಂದು ನಿರ್ದೇಶಕ ನೀಲ್ ಹೇಳಿದ್ದಾರೆ. ಮಕ್ಕಳು ನ್ಯಾಯಕ್ಕಾಗಿ ಹೋರಾಡುವ ವಿಶೇಷ ಕಥಾವಸ್ತು ‘ರಾಮರಾಜ್ಯ’ ಚಿತ್ರದಲ್ಲಿದೆಯಂತೆ.